ಜೋಯಿಡಾ: ತಾಲೂಕ್ಯಾದಂತ ಪ್ರಸಕ್ತ ವರ್ಷದ ಶೈಕ್ಷಣಿಕ ಶಾಲಾ ಚಟುವಟಿಕೆಗಳಿಗೆ ಸಡಗರ, ಸಂಭ್ರಮದಿಂದ ಚಾಲನೆ ನೀಡಲಾಯಿತು. ಶಾಲಾ ಕೊಠಡಿ, ಆವರಣಗಳನ್ನು ಸ್ವಚ್ಛಗೊಳಿಸಲು ಒಂದು ದಿನಗಳ ಕಾಲ ಮೀಸಲಿಟ್ಟು ಬಾಳೆಗಿಡ,ಮಾವಿನ ತಳಿರು, ತೋರಣಗಳಿಂದ ಶಾಲಾ ಆವರಣ ಕೊಠಡಿಗಳನ್ನು ಸಿಂಗರಿಸಿ ಚಿಣ್ಣರಿಗೆ ಹೂ ಗುಚ್ಛಗಳನ್ನು ನೀಡಿ ಸ್ವಾಗತಿಸಲಾಯಿತು. ಮಧ್ಯಾಹ್ನ ಸಿಹಿ ವಿತರಿಸಲಾಯಿತು.ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಕಳೆದ 48 ದಿನಗಳಿಂದ ಚಿಣ್ಣರ ಕಲರವ ಇಲ್ಲದೇ ಬಿಕೋ ಎನ್ನುತ್ತಿದ್ದ ಶಾಲಾ ಕೊಠಡಿ,ಆವರಣಗಳಲ್ಲಿ ಕಳೆ ಬಂದಿತು. ಹಳೆಯ ವಿಧ್ಯಾರ್ಥಿಗಳು ತಮ್ಮ ಸಹಪಾಠಿಗಳ ಜೊತೆ ಉಭಯ ಕುಶಲೋಪರಿ, ತಾವು ರಜಾವಧಿಯಲ್ಲಿ ಭಾಗವಹಿಸಿದ ಕಾರ್ಯಕ್ರಮ,ಮೋಜು ಮಸ್ತಿಗಳ ಬಗ್ಗೆ ಪರಸ್ಪರ ಚರ್ಚೆ ನಡೆಸಿದರು. ಪ್ರಥಮ ತರಗತಿಗೆ ಬಂದ, ಪ್ರೌಢ ಶಾಲೆಗೆ ಬಂದ ವಿದ್ಯಾರ್ಥಿಗಳ ಪರಸ್ಪರ ಪರಿಚಯ ನಡೆಯಿತು. ಪ್ರಥಮ ತರಗತಿಗೆ ಪ್ರವೇಶ ಪಡೆಯುವ, ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಹೊಸ ಶಾಲೆಯ ವಾತಾವರಣ,ಶಿಕ್ಷಕರ ಜೊತೆ ಬೆರೆಯುವ ದುಗುಡ ಕಾಡಿತ್ತು. ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ಗ್ರಾಮಸ್ಥರು, ಶಿಕ್ಷಕರು, ಮಕ್ಕಳು ಮೆರವಣಿಗೆಯ ಮೂಲಕ ಆಗಮಿಸಿ ಶಿಕ್ಷಣದ ಅವಶ್ಯಕತೆ ಕುರಿತು ಈ ವರ್ಷದ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಅದೇ ರೀತಿಯಾಗಿ ನಂದಿಗದ್ದೆ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ,ಕಿರಿಯ ಪ್ರಾಥಮಿಕ ಶಾಲೆಗಳು, ಗುಂದದ ಪ್ರೌಢಶಾಲೆ, ಹೆಣಕೋಳ, ಬಾಮಣಗಿ,ಅವುರ್ಲಿ, ಕಾರಟೋಳಿ,ಮುಡಿಯೇ, ವಾಗೇಲಿ,ಖಾನಗಾಂವ,ಹನುಮಾನ್ ಲೇನ್, ಕೊಂದರ ಹೀಗೆ ತಾಲೂಕಿನ ಶಾಲೆಗಳಲ್ಲಿ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ,ಉಪಾಧ್ಯಕ್ಷ, ಸದಸ್ಯರು, ಪಾಲಕರು,ಪೋಷಕರು ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು.